*ಶೀರ್ಷಿಕೆ :- ಕಾರುಣ್ಯ ಕನ್ನಡಕೆ ಜಾನಪದ ಕಲೆಯೇ ಕಳೆ*

 ಅಬ್ಬಾ! ನನ್ನೀ ನೆಲದಲ್ಲಿ ಎಲ್ಲರ ಮನಸೆಳೆಯುವ ಕಲೆಯ ಆಗರವೆಂದರೆ ಜಾನಪದ ಕಲೆ. ಕಲಾ ಆರಾಧಕರಿಗೆ "ಜಾನಪದವೇ ಜೀವಾಳ" ಪ್ರತಿಯೊಂದು ಜಾನಪದ ಕಲೆಯು ಕೂಡ ತನ್ನದೇ ಆದ ವೈಶಿಷ್ಟವನ್ನು, ವೈಭೋಗವನ್ನು ನಮ್ಮ ನಮ್ಮ ಪ್ರಾಚೀನತೆಯ ಕುರುಹುಗಳನ್ನು ತಿಳಿಸುವ ರಸಸ್ವಾದಭರಿತ ರಸಮಂಜರಿಯಾಗಿದೆ. ಖೇದ ಮನಸ್ಸಿಗೂ ಕೂಡ ಮುದ ನೀಡುವ ಶಕ್ತಿ ನಮ್ಮ ಜಾನಪದ ಕಲೆಗಳಿಗಿವೆ. ಈ ಜಾನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನವಾದದ್ದು. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜಾನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿದೆ. ಈ ನಾಡಿನಲ್ಲಿ ಅನೇಕ ಶೈಲಿಯ ಜಾನಪದ ಕಲೆಗಳಿವೆ ಅವುಗಳನ್ನು ನಾವು ಕಾಣಬಹುದು.

ಕಂಸಾಳೆಯು  ಬಹುಮುಖ್ಯವಾದ ಜಾನಪದ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ವಿಶಿಷ್ಟ ಜಾನಪದ ಸಂಪ್ರದಾಯಗಳನ್ನು ಬೆಳೆಸಿಕೊಂಡು ಬಂದಿದೆ. ಕಂಸಾಳೆಯ ಕಲಾವಿದರು ಮೈಸೂರು ಜಿಲ್ಲೆಯ ಮಹದೇಶ್ವರರ ಭಕ್ತರು. ಇದರ ನಿಷ್ಪತ್ತಿ 'ಕಾಂಸ್ಯ' ( ಕಂಚು ) ತಾಳವೆ ಕಂಸಾಳೆಯಾಗಿದೆ. ಇದಕ್ಕೆ ಕೇಶಿರಾಜನ ಸಮರ್ಥನೆಯೆಂದರೆ " ಪೂರ್ವ ಪದಂತಕ್ಕೆ ದೀರ್ಘಮುಂ ಉತ್ತರ ಪದಾವಿಗೆ ಲೋಪಮುಮಾಗಿ ಕಾಂಸ್ಯತಾಳಕ್ಕೆ ಕಂಸಾಳಂ ಎಂದಾಯ್ತು ಎಂಬ ಅರ್ಥ ವಿವರಣೆ ನೀಡಿದ್ದಾರೆ. ಕಂಸಾಳೆ ಮೇಳದಲ್ಲಿ ಮೂರರಿಂದ ಎಂಟು ಜನ ಭಾಗವಹಿಸುತ್ತಾರೆ. ಕಂಸಾಳೆಯ ಪ್ರಕಾರಗಳಲ್ಲಿ 'ಬೀಸು 'ಕಂಸಾಳೆಯು ವಿಶಿಷ್ಟ ಶೈಲಿಯದು. ಇದು ಶ್ರಮ ಹಾಗೂ ಚಮತ್ಕಾರ ಒಟ್ಟಿಗೆ ಅಭಿವ್ಯಕ್ತಿಯಾಗುವ ಪ್ರದರ್ಶನವಾಗಿದೆ.

 ಜನಮನ ಗೆದ್ದ ಜಾನಪದ ಪ್ರಕಾರವೆಂದರೆ ಯಕ್ಷಗಾನ. ಯಕ್ಷಗಾನವು ನೃತ್ಯ, ಹಾಡುಗರಿಕೆ, ಮಾತುಗಾರಿಕೆ, ವೇಷ- ಭೂಷಣಗಳಣ್ಣೊಳಗೊಂಡ ಒಂದು ಶಾಸ್ತ್ರೀಯ ಕಲೆ. ಇದು  ಉತ್ತರಕನ್ನಡ ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಮನೆಮಾತಾಗಿದೆ. ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ ಇದರ ಕುರುಹುಗಳಿವೆ. ಕನ್ನಡದ ಪ್ರಾಚೀನ ಕಾವ್ಯಗಳಲ್ಲಿ ಇದನ್ನು ಕಾಣಬಹುದು. ಯಕ್ಷಗಾನ ನಾಲ್ಕು ಕಲಾಮಾಧ್ಯಮಗಳಿಂದ ಕೂಡಿದ ಸಮ್ಮಿಶ್ರ ಕಲೆ. ಇದಾರಲ್ಲಿ ಸಂಗೀತ, ಸಾಹಿತ್ಯ, ನೃತ್ಯ, ಮತ್ತು ಚಿತ್ರ ಈ ನಾಲ್ಕು ಕಲೆಗಳ ಔಚಿತ್ಯಪೂರ್ಣವಾದ ಸಾಮರಸ್ಯವಿದೆ. ಇದರಲ್ಲಿ ೨ ಭಾಗಗಳಿವೆ.
೧ಪೂರ್ವರಂಗ
 ೨ಆರಿಸಿಕೊಂಡ ಸಹಭಾಗ
 ಯಕ್ಷಗಾನದಲ್ಲಿ ಕಾಣಬರುವ ಐದು ಅಂಶಗಳೆಂದರೆ
 ೧ಪ್ರಸಂಗ
೨ಪಾತ್ರದಾರಿಗಳು
 ೩ವೇಷಭೂಷಣ
 ೪ಭಾಗವತಿಕೆ
 ೫ಮಾತುಗಾರಿಕೆ
 ಯಕ್ಷಗಾನದಲ್ಲಿ ಅನೇಕ ಪ್ರಭೇದಗಳಿದ್ದು ಯಕ್ಷಗಾನ ಬಯಲಾಟವು ಅತ್ಯಂತ ಜನಪ್ರಿಯವಾಗಿದೆ. ತೆಂಕುತಿಟ್ಟು ಬಡಗುತಿಟ್ಟುಗಳು ಕೂಡ ಪ್ರಸಿದ್ಧಿ ಪಡೆದಿವೆ.

ಡೊಳ್ಳುಕುಣಿತವು  ಪುರುಷರಿಗೆ ಮೀಸಲಾದ ಕಲೆ. ಒಳ್ಳೆಯ ಮೈಕಟ್ಟು ಶಕ್ತಿ ಉಳ್ಳವರು ಈ ಕಲೆಯನ್ನು ಪ್ರದರ್ಶಿಸುವರು. ಡೊಳ್ಳು ಬರಿಸಿಕೊಂಡು ಕುಣಿಯುವುದಕ್ಕೆ ಇದನ್ನು ಡೊಳ್ಳುಕುಣಿತ ಎನ್ನುವರು. ಮೂಲತಃ ಇದು ಕುರುಬ ಜನಾಂಗದಲ್ಲಿ ಕಂಡುಬರುವ ಹಳ್ಳಿಯ ಸೊಗಡಾಗಿದೆ. ಡೊಲ್ಲನ್ನು ಮರ ಮತ್ತು ಚರ್ಮದಿಂದ ತಯಾರಿಸುತ್ತಾರೆ. ಡೊಳ್ಳು ಬಾರಿಸುವ ಹಿನ್ನಲೆಯಲ್ಲಿ ತಾಳ, ಕಂಕಳೆ ಜಾಗಟೆ, ಕೊಳಲುಗಳನ್ನು ಬಾರಿಸುತ್ತಾರೆ ಇದರಲ್ಲಿ ಅನೇಕ ಪ್ರಕಾರಗಳಿವೆ.
೧ ಕುಳಿತು ಬಾರಿಸುವುದು
 ೨ಲಾಗ ಹಾಕುವುದು
೩ಹಾರಿ ಬಾರಿಸುವುದು
 ೪ಮಂಡಿ ಬಡಿತ
 ೫ಮುಂಗಾಲು ಬಡಿತ
 ೬ಗಾಡಿ ಚಕ್ರದ ಬಡಿತ
 ೭ಇತರೆ ಪ್ರಕಾರಗಳು
ಇದು ಜನರನ್ನು ಹೆಚ್ಚು ಆಕರ್ಷಸುವ ಕಲೆಯಾಗಿದೆ.

ಸುಗ್ಗಿಹಬ್ಬ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಆಚರಣೆಯಲ್ಲಿರುವ ಪ್ರಕ್ರಿಯೆ ಉತ್ತರಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತವು ವೈಶಿಷ್ಟಪೂರ್ಣವಾಗಿದೆ. ಇದರ ವೇಷಭೂಷಣ ರಮಣೀಯವಾಗಿದೆ . ಸೀರೆ ಮೊಣಕಾಲಿನವರೆಗೆ ಬರುವಂತೆ ನೆರಿಗೆಯಾಗಿ ಉಟ್ಟು ಇಲ್ಲವೇ ಪಾಯೀಜಾಮ ತೊಟ್ಟು ಕೆಂಪು ಬಣ್ಣದ ನಿಲುವಂಗಿ ಹಾಕಿ ಮೇಲೆ  ಜಾಕಿಮು ಧರಿಸಿ ಸೊಂಟಕ್ಕೆ ತುಂಡುವಸ್ತ್ರಗಳನ್ನು ಧರಿಸುತ್ತಾರೆ. ತಲೆಗೆ ರುಮಾಲು ಸುತ್ತಿ ತುರಾಯಿಯನ್ನು ಪೂಜಿಸಿ ಕಟ್ಟಿಕೊಳ್ಳುತ್ತಾರೆ. ಈ ಹಬ್ಬವು ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ ಎರಡು ವಾರಗಳ ಕಾಲ ಇದು ನಡೆಯುತ್ತದೆ. ಇದರಲ್ಲಿ 'ಚೌತ' ಮಾಡುತ್ತಾರೆ ಅಂದರೆ ಮನೆಯ ಒಳಗೆ ಹೊರಗೆ ಸ್ವಚ್ಚಮಾಡುತ್ತಾರೆ.

ಹುಲಿವೇಶ ತುಳುನಾಡಿನ ಬಹಳ ಶ್ರೇಷ್ಠವಾದ ಮತ್ತು ಜನಪ್ರಿಯವಾದ ಜಾನಪದ ಕಲೆ ಇದರಲ್ಲಿ ೫ರಿಂದ ೧0 ಮಂದಿ ಯುವಕರಲ್ಲಿ ೩ರಿಂದ ೫ ಜನ ಮಂದಿ ಹುಲಿ ಬಣ್ಣ ಹಚ್ಚಿಕೊಂಡು ಎರಡರಿಂದ ಮೂರು ಜನ ಚಂಡೆ ಬಾರಿಸುತ್ತಾರೆ. ವೇಷ ನೃತ್ಯದ ಸಮಯದಲ್ಲಿ ಹಲವಾರು ಪ್ರದರ್ಶನಗಳನ್ನು ಮಾಡುತ್ತಾರೆ. ' ಗಾವುಜಿಗಿತ ' ನರ್ತಕನು ಕುರಿಯನ್ನು ಬಾಯಿಂದ ಕಚ್ಚಿ ಗಾಳಿಯಲ್ಲಿ ತೂರಿ ಹಾರಿಸುವ ಪ್ರದರ್ಶನ. ಇದು ಹುಲಿ ಕುರಿಯನ್ನು ಸಾಯಿಸುವ ಪ್ರದರ್ಶನವಾಗಿದೆ. ಇದು ಬಹಳ ಪ್ರಸಿದ್ದಿಯನ್ನು ಪಡೆದಿದೆ

ಈ ಜಾನಪದ ಕಲೆಗಳು ಕರ್ನಾಟಕದ ಹೆಮ್ಮೆಯಾಗಿದೆ ಕರ್ನಾಟಕದ ಕೀರ್ತಿ ಕಳಸಪ್ರಾಯದಂತೆ ಜಾನಪದ ಕಲೆಗಳು ನಮ್ಮ ಹಿರಿಮೆಯನ್ನು ತೋರಿಸುವ ಕಲಾ ಆಗರವಾಗಿದೆ. ಆದರೆ ಇಂದಿನ ಯುವಕರು (ತರುಣರು ) ಇದರಲ್ಲಿ ಆಸಕ್ತಿಯನ್ನು ಇಳಿಕೆ ಕ್ರಮದಲ್ಲಿ ಕಡಿಮೆ ಮಾಡಿದ್ದಾರೆ. ಇದು ಶೋಚನಿಯ ಸಂಗತಿಯಾಗಿದೆ. ನಾನಾ ಬಗೆಯ ಜಾನಪದ ಕಲೆಗಳು ಇಂದು ಕಣ್ಮರೆಯಾದದನ್ನು ಕಾಣಬಹುದಾಗಿದೆ ನಾವೆಲ್ಲ ಸೇರಿ ಇದರ ಉಳಿವಿಗೆ ಪರಿಶ್ರಮ ಪಡಬೇಕಿದೆ.

 *✍️ನಾಗರಾಜ್ ಶೇಟ್                             BA ಪ್ರಥಮವರ್ಷ✍️*..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೋಡ ಬಾ ನಮ್ಮೂರ ಸಸ್ಯಲೋಕ "

ಡಮಾಮಿ

ಯುಗಾದಿ